ಮಂಗಳವಾರ, ನವೆಂಬರ್ 4, 2014

ಮತ್ತೆ ಹುಟ್ಟಿ ಬಾರದಿರು ನಂದಿತಾ , ನಿನ್ನ ಕಾಪಾಡುವ ಯೋಗ್ಯತೆ ನಮಗಿಲ್ಲ ..



ತೀರ್ಥಹಳ್ಳಿ ಬೆಚ್ಚಿ ಬಿದ್ದಿದೆ .... ನಿಜ ತೀರ್ಥಹಳ್ಳಿ ಬೆಚ್ಚಿ ಬಿದ್ದಿದೆ..
ಯಾವ ಊರನ್ನು , ಸುಸಂಸ್ಕೃತರ ನಾಡು ಅನ್ನುತ್ತಿದ್ದೆವು, ಯಾವ ಊರಿನ ಜನರನ್ನು ಸಭ್ಯರು , ಸಜ್ಜನರು ಅನ್ನುತ್ತಿದ್ದೆವು ,ಯಾವ ಊರಿನಲ್ಲಿ ನೀರು ಕೇಳಿದವರಿಗೆ ಬೆಲ್ಲ ಕೊಡುತ್ತಿದ್ದರೋ , ಅದೇ ಜನ ಇಂದು ರೊಚ್ಚಿಗೆದ್ದಿದ್ದಾರೆ , ತಮ್ಮದೇ ಊರಿನ ಎಳೆ ಹೆಣ್ಣು ಮಗಳನ್ನ , ಹಾಡಹಗಲೇ ಅಪಹರಿಸಿ , ಅತ್ಯಾಚಾರ ನಡೆಸಿ , ವಿಷ ಕುಡಿಸಿ ಕೊಲೆಗೈದ ಸಂಗತಿಯನ್ನ ಅರಗಿಸಿಕೊಳ್ಳಲಾಗದೆ ತೊಳಲಾಡುತ್ತಿದ್ದಾರೆ ... ತೀರ್ಥಹಳ್ಳಿ ಜನ ಬೀದಿಗೆ ಬಂದಿದ್ದಾರೆ , ಆ ನತದೃಷ್ಟ ಹೆಣ್ಣು ಮಗಳಿಗೆ ಆದ ಅನ್ಯಾಯಕ್ಕೆ ಪ್ರತಿಕಾರ ಕೇಳುತ್ತಿದ್ದರೆ , ಸತ್ತವಳು ಯಾರ ಮಗಳಾದರೇನು , ತಮ್ಮದೇ ಮಗಳೇನು ಎಂಬಂತೆ ಕಂಬನಿ ಮಿಡಿದಿದ್ದಾರೆ ... ಇಡಿ ತಾಲೂಕ್ಕಿಗೆ ತಾಲೂಕು ಪ್ರತಿಭಟನೆಯಲ್ಲಿ ನಿರತವಾಗಿದ್ದರೆ , ಆದರೆ ಇಲ್ಲೊಬ್ಬ ಮನುಷ್ಯ ಏನು ಆಗಿಯೇ ಇಲ್ಲವಂತೆ ತಣ್ಣಗೆ ಹೇಳಿಕೆ ಕೊಡುತ್ತ ಓಡಾಡುತ್ತಿದ್ದಾರೆ, ಆ ಮನುಷ್ಯ ಬೇರೆ ಯಾರು ಅಲ್ಲ , ಈ ಘನವೆತ್ತ ಸರ್ಕಾರದ ಶಿಕ್ಷಣ ಮಂತ್ರಿ , ತೀರ್ಥಹಳ್ಳಿ ಕ್ಷೇತ್ರದ ಶಾಸಕ ಕಿಮ್ಮನೆ ರತ್ನಾಕರ್ ...

ಕಿಮ್ಮನೆ ರತ್ನಾಕರ್ , ಹುಡುಗಿ ತೀರಿಕೊಂಡ ದಿನ ಕೊಟ್ಟ  ಹೇಳಿಕೆ ಹೇಗಿತ್ತು ಎಂದರೆ , ತೀರ್ಥಹಳ್ಳಿ ಜನತೆಗೂ , ನಂದಿತಾ ಸಾವಿಗೂ ಸಂಭಂದವೇ ಇಲ್ಲ , ಪ್ರತಿಭಟನೆ , ಗಲಾಟೆ ನಡೆಸುತ್ತಿರುವುದು ಬಿಜೆಪಿ ಜನರೇ ಹೊರತು, ಸಾಮಾನ್ಯ ನಾಗರಿಕರಲ್ಲ ಎಂದು .ಒಬ್ಬ ಜನಪ್ರತಿನಿಧಿ ಹಾಳಾಗಿ ಹೋಗಲಿ , ಒಬ್ಬ ಮನುಷ್ಯನಾಗಿ ಇಂತಹ ಮಾತು ಯಾರಾದ್ರೂ ಆಡಲು ಸಾಧ್ಯವೇ .. ಬಾಲಕಿಯ ಸಾವಿನಲ್ಲೂ ರಾಜಕೀಯ ಹುಡುಕುವ... ಸಾವಿಗೆ ನ್ಯಾಯ ಕೇಳುವ ಪ್ರತಿಭಟನೆಯಲ್ಲೂ ದುರುದ್ದೇಶ ಕಾಣುವ ಇಂತಹ ಮನುಷ್ಯ , ತೀರ್ಥಹಳ್ಳಿ ಕ್ಷೇತ್ರದ ಶಾಸಕ ಅನ್ನುವುದು , ಇಡಿ ತೀರ್ಥಹಳ್ಳಿಯ ಪ್ರಜ್ಞಾವಂತ ನಾಗರಿಕರ ತಲೆ ತಗ್ಗಿಸುವಂತೆ ಮಾಡಿದೆ..  ತೀರ್ಥಹಳ್ಳಿ ಯಾ ಜನ ಒಬ್ಬ ಅಮಾಯಕ ಬಾಲಕಿಯ ಸಾವಿಗೆ ನ್ಯಾಯ ಕೇಳುವ ಹಾಗೆ ಇಲ್ಲವ ? ಹಾಗಾದ್ರೆ ತೀರ್ಥಹಳ್ಳಿಯ ಸಾಮಾನ್ಯ ನಾಗರಿಕ ಅಷ್ಟೊಂದು ಸಂವೇದನ ಹೀನನಾಗಿ ಬದಲಾದನೆ ? , ನಂದಿತಾ ಳ ಶವ ಮೆರವಣಿಗೆಯಲ್ಲಿ ಕಣ್ಣಿರು ಇಡುತ್ತಿದ್ದ ಹೆಣ್ಣು ಮಕ್ಕಳು ಗ್ಲಿಸರಿನ್ ಹಾಕಿ ಕೊಂಡು ಬಂದಿದ್ದರೆ? ಹೇಳಿ ಕಿಮ್ಮನೆ ಅವರೇ , ಇಂತಹ ಬರ್ಬರತೆ ಯನ್ನ ಖಂಡಿಸಲು ಒಂದು ಪಕ್ಷದ ಕಾರ್ಯಕರ್ತ ಆಗಿಯೇ ಇರಬೇಕೆ ? ಕಿಮ್ಮನೆ ಅವರಿಗೆ ಅತ್ಯಾಚಾರಿಗಳನ್ನ  ರಕ್ಷಿಸಲು ಇಂತಹ ಉತ್ಸಾಹ ಯಾಕೆ ? ನಂದಿತಾ ಳ ಕೊಲೆಯನ್ನ , ಅಸಹಜ ಸಾವು ಎಂದು ಬಿಂಬಿಸಲು ಕಾರಣ , ಅವರ ಹೃದಯ ಹೀನ ಲೆಕ್ಕಾಚಾರ . ಇಷ್ಟಕ್ಕೂ ಕಿಮ್ಮನೆ ಈ ಕೆಳಮಟ್ಟಕ್ಕೆ ಇಳಿಯಲು ಕಾರಣ , ತಮ್ಮ ಸಮಸ್ತ ಚುನಾವಣಾ ಖರ್ಚು ನೋಡಿಕೊಂಡ ನ್ಯಾಷನಲ್  ಬ್ರದರ್ಸ್ ನ ಋಣ ಸಂದಾಯ ಎಂದು  ಇಡಿ ತೀರ್ಥಹಳ್ಳಿ ಮಾತನಾಡುತ್ತಿದೆ .

ಅತ್ಯಂತ ಸಭ್ಯ ಊರು ಎಂದು ಕರೆಸಿಕೊಳ್ಳುವ ತೀರ್ಥಹಳ್ಳಿಯಲ್ಲಿ , ಹೆಣ್ಣು ಮಕ್ಕಳನ್ನು ದೇಶದ ನಾನಾ  ವೇಶ್ಯಾವಾಟಿಕೆಗೆ ಗೃಹಕ್ಕೆ  ಮಾರುವ ವ್ಯವಸ್ತಿತ ಜಾಲ ಇದೆ .. ಕಳ್ಳ ನೋಟು ಚಲಾವಣೆ ಮಾಡುವ ಜಾಲವಿದೆ , ಶ್ರೀಗಂದ ತೀರುವ ತನಕ ತಿಂದು ತೇಗಿದ ಕಳ್ಳರ ಗುಂಪು ಈಗ , ಮರಗಳ್ಳತನಕ್ಕೆ ಇಳಿದಿದ್ದಾರೆ , ಅಕ್ರಮ ಮರಳು ದಂಧೆ , ಅಕ್ರಮ ಕಲ್ಲು ಗಣಿಗಾರಿಕೆ  ಇದೆ, ಇಷ್ಟೆಲ್ಲಾ ಇದ್ದರು , ಇಲ್ಲಿನ ಪೋಲಿಸ್ ರು ಸುಖ ಜೀವಿಗಳು.. ಯಾವ ಅಕ್ರಮಕ್ಕು ಬ್ರೇಕ್ ಹಾಕಿದ ಉದಾಹರಣೆ ಇಲ್ಲ.. ಆದರೆ ನಂದಿತಾ ಕೊಲೆ , ಪ್ರಕರಣವನ್ನ ಆತ್ಮಹತ್ಯೆ ಎಂದು ನಿರೂಪಿಸಲು ಸಾಕಷ್ಟು ಬೆವರು ಹರಿಸುತ್ತಿರುವುದರ ಹಿಂದಿನ ಗುಟ್ಟು , ಇದೆ ಕಿಮ್ಮನೆ ರತ್ನಾಕರ್ ನ ಅಧಿಕಾರ ಮತ್ತು ನ್ಯಾಷನಲ್ ಬ್ರದರ್ನನ  ಹಣ ಎಂದು ಚಿಕ್ಕ ಮಕ್ಕಳು ಕೂಡ ಹೇಳುತ್ತಿದ್ದಾರೆ...
ಕೆಲವು ವರ್ಷದ ಹಿಂದೆ ತೀರ್ಥಹಳ್ಳಿ ಸುತ್ತಮುತ್ತಲ ಊರುಗಳಾದ , ಕುಂದಾದ್ರಿ ಬೆಟ್ಟಕ್ಕೆ , ಕುಪ್ಪಳಿ ಕಾಡಿಗೆ ಏಕಾಂತ ಅರಸಿ ಬರುತ್ತಿದ್ದ ಯುವ ಜೋಡಿಗಳನ್ನ , ಥಳಿಸಿ , ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅದರ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದ ಒಂದು ತಂಡವೆ ಅಸ್ತಿತ್ವದಲ್ಲಿತ್ತು , ಕಾಲ ಕ್ರಮೇಣ ಇಂತಹ ಘಟನೆಗೆ ಅಂಜಿದ ಜೋಡಿಗಳು ಅಂತಹ ಜಾಗಕ್ಕೆ ಹೋಗಲು ನಿಲ್ಲಿಸದವೋ , ಆ ತಂಡಗಳು ತಮ್ಮ ಕೆಲಸ ಶುರು ಮಾಡಿದ್ದು ತೀರ್ಥಹಳ್ಳಿ ಊರಿನಲ್ಲಿಯೇ , ಹೈ ಸ್ಕೂಲ್ ಗೆ ಹೋಗುವ  ಹೆಣ್ಣು ಮಕ್ಕಳನ್ನು , ಪರಿಚಯ ಮಾಡಿಕೊಳ್ಳುವುದು , ಅವರಿಗೆ ಮೊಬೈಲ್ , ಚಾಕಲೇಟ್ ಆಸೆ ತೋರಿಸಿ , ಲೈಂಗಿಕವಾಗಿ ಬಳಸಿಕೊಳ್ಳುವುದು , ಮೊಬೈಲ್ , ಚಾಕಲೇಟ್ ಆಮಿಷಕ್ಕೆ ಬೀಳದ ಹುಡುಗಿಯರನ್ನ , ಮಾದಕ ಪದಾರ್ಥ ಕೊಟ್ಟು  ಉಪಯೋಗಿಸಿಕೊಳ್ಳುವುದು , ಅದನ್ನ ವೀಡಿಯೊ ಮಾಡಿ ಬ್ಲಾಕ್ ಮೇಲ್ ಮಾಡುವುದು ... ಇದೆ ಬ್ಲಾಕ್ಮೇಲ್ ಗೆ ಭಯ ಬೀಳುವ ಹೆಣ್ಣು ಮಕ್ಕಳನ್ನ , ಪದೇ ಪದೇ ಸಾಮೂಹಿಕ ಅತ್ಯಾಚಾರಕ್ಕೆ ಇಡು ಮಾಡುವುದು. ಇಂತಹ ಬಹಳಷ್ಟು ಬೆಳಕಿಗೆ ಬಾರದೆ ಮುಚ್ಚಿ ಹೋಗಿವೆ  .. ಈಗ್ಗೆ ಒಂದು ವರ್ಷದ ಹಿಂದೆ ಬೆಳಕಿಗೆ ಬಂದ ಪ್ರಕರಣದಲ್ಲೂ ಹೀಗೆ ಆಗಿತ್ತು , ಪದೇ ಪದೇ ತನ್ನ ಮೇಲೆ ನಡೆದ ದೌರ್ಜನ್ಯ ಸಹಿಸದ ಬಾಲಕಿ , ತನ್ನ ಪೋಷಕರಲ್ಲಿ ಹೇಳಿಕೊಂಡರೆ , ಮರ್ಯಾದೆಗೆ ಅಂಜಿದ ಪೋಷಕರು .. ಆ ವಿಷಯವನ್ನೇ ಮುಚ್ಚಿ ಹಾಕಿದ್ದರು .. ನಂದಿತಾ ಪ್ರಕರಣ ಇದಕ್ಕಿಂತ ಬಿನ್ನವೇನು ಅಲ್ಲ .. ಒಂದು ಪಕ್ಷ ಆಕೆಯ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನ , ಕಟ್ಟಿಗೆ ಆರಿಸಲು ಬಂದಿದ್ದ ತುಡ್ಕಿ ಗ್ರಾಮದ ಜನ ನೋಡದೆ ಇದ್ದಿದ್ದರೆ , ಈ ಪ್ರಕರಣ ಕೂಡ ಮುಚ್ಚಿ ಹೋಗುತ್ತಿದ್ದರಲ್ಲಿ ಸಂಶಯ ಇಲ್ಲ.. ತೀರ ಅಸ್ವಸ್ತ ಗೊಂಡಿದ್ದ ಬಾಲಕಿ , ಆಸ್ಪತ್ರೆ ಸೇರಿದ್ದು , ಆಕೆಯ ಮೇಲೆ ದೌರ್ಜನ್ಯ ನಡೆದಿದ್ದು ಬೆಳಕಿಗೆ ಬಂದಿದ್ದೆ , ಆಕೆ ಸತ್ತ ನಂತರ ... ತೀರ್ಥಹಳ್ಳಿ ಪೊಲೀಸರು ಎಷ್ಟರ ಮಟ್ಟಿಗೆ ಕ್ರಿಯಾಶೀಲರು ಅಂದರೆ , ನಂದಿತಾ ಳ ತಂದೆ ಬಂದು ಕಂಪ್ಲೇಂಟ್ ಕೊಡುವವರೆಗೂ , ಕುರ್ಚಿಗೆ ಹೊಡಿಸಿಕೊಂಡಿದ್ದ ಮೊಳೆ ತೆಗೆದುಕೊಳ್ಳುವ ಪ್ರಯತ್ನವನ್ನೇ ಮಾಡಿರಲಿಲ್ಲ .
ನಂದಿತಾ ಳ ಕೊಲೆ ಪ್ರಕರಣ ಮುಚ್ಚಿ ಹಾಕಲು ಮೊದಲು ತೇಲಿಸಿದ ಕಥೆ ಏನೆಂದರೆ “ ನಂದಿತಾ ಳಿಗೂ ಕೊಲೆ ಆರೋಪಿ ಹುಡುಗನಿಗೂ ಆಕೆಗೂ ಅನೈತಿಕ ಸಂಭಂದ ಇತ್ತು, ಆಕೆಯ ಇಚ್ಛೆ ಮೇರೆಗೆ ಆನಂದ ಗಿರಿಯಲ್ಲಿ , ಇಬ್ಬರು ಕೇಳಿಯಲ್ಲಿ ತೊಡಗಿದ್ದರು ಅದನ್ನ ಕಂಡ ಗ್ರಾಮಸ್ತರು ಆಕೆಯ ಮನೆಗೆ ವಿಷಯ ತಿಳಿಸಿದ್ದಾರೆ , ಮನೆಗೆ ಕರೆದುಕೊಂಡ ಪೋಷಕರು ಆಕೆಗೆ ಥಳಿಸಿದ್ದಾರೆ , ಆ ಅವಮಾನಕ್ಕೆ ಅಂಜಿದ ಹುಡುಗಿ ವಿಷ ಸೇವೆಸಿ ಪ್ರಾಣ ಬಿಟ್ಟಿದ್ದಾಳೆ “.- ಮನುಷ್ಯತ್ವ ಇರುವ ಯಾರಾದರು ಆಡುವ ಮಾತ ಇದು ? ೧೩ ವಯಸ್ಸಿನ ಹುಡುಗಿಯನ್ನ ಅನಾಯಾಸವಾಗಿ ಅನೈತಿಕತೆಗೆ ಇಳಿಸಿ ಬಿಟ್ಟರು .. ಆದರೆ ಬಾಲಕಿ ಮೇಲೆ ನಡೆಯುವ ಸಮ್ಮತಿ ಕಾಮ ಕೂಡ ಅತ್ಯಾಚಾರ ಅನ್ನಿಸಿಕೊಳ್ಳುತ್ತದೆ ಅಂತ ಯಾವಾಗ ಈ ದುರುಳರಿಗೆ ಹೊಳೆಯಿತೋ ತಕ್ಷಣ ಕಥೆ ಬದಲಾವಣೆ ಆಯ್ತು.
ಈಗ ಚಾಲ್ತಿಯಲ್ಲಿರುವ ಕಥೆ ಪ್ರಕಾರ “ ನಂದಿತಾ ತಾನು ಸರಿಯಾಗಿ ಓದುತ್ತಿಲ್ಲ ಅಂತ ಅರಿವಾಗಿ (ನೆನಪಿರಲಿ ಪರೀಕ್ಷೆ ನಡೆಯಲು ಇನ್ನು ೫ ತಿಂಗಳು ಬಾಕಿ ಇದೆ ) ಒಂದು ಪತ್ರವನ್ನ ಸ್ವಚ್ಛ ಕನ್ನಡದಲ್ಲಿ ಟೈಪ್ ಮಾಡಿಸಿ , ಪ್ರಿಂಟ್ ತೆಗಿಸಿ , ಬ್ಯಾಗ್ ನಲ್ಲಿ ಇಟ್ಟುಕೊಂಡು , ಆನಂದ ಗಿರಿಗೆ ಹೋಗಿ ವಿಷ ತೆಗೆದು ಕೊಂಡಳಂತೆ .. – ೧೩ ವರ್ಷದ ಬಾಲಕಿ ಡೆತ್ ನೋಟ್ ಟೈಪ್ ಮಾಡಿಸಿ ಇಟ್ಟುಕೊಳ್ಳುವುದು ಸಾದ್ಯವೇ ಎಂದು ಎಲ್ಲ ಕ್ಯಾಕರಿಸಿ ಉಗಿದ ಮೇಲೆ , ಪೊಲೀಸರು ತೀರಿ ಕೊಂಡ, ಹುಡುಗಿಯನ್ನ ಮತ್ತೆ ಬದುಕಿಸಿ , ಆಕೆಯ ಕೈಯಿಂದ ಮತ್ತೊಂದು ಡೆತ್ ನೋಟ್ ಬರೆಸಿ , ಹಾಜರು ಪಡಿಸಿದ್ದಾರೆ ... ಆಹಾ ಒಂದು ಕೇಸ್ ಮುಚ್ಚಿ ಹಾಕಲು ಎಂತ ಪ್ರಯತ್ನ .. ಇವರೇನು ತಿರ್ಥಹಳ್ಳಿಯ ಜನರನ್ನ ಮೂರ್ಖರು ಅಂತ ಭಾವಿಸಿದ್ದಾರೆ ಅಂತ ಅನ್ನಿಸುತ್ತದೆ . ಮಾದ್ಯಮಕ್ಕೆ ಬಿಡುಗಡೆ ಮಾಡಿದ್ದ ಟೈಪ್ ಮಾಡಿದ ಪತ್ರ & ಅದು ಸರಿಯಾಗಿಲ್ಲ ಎಂದು ಅದರ ಹಿಂದೆಯೇ ಬಂದ ಹಸ್ತಾಕ್ಷರ ದ ಪತ್ರ  ಯಾರ ಸೃಷ್ಟಿ ಅಂತ ಹೊಸದಾಗಿ ಹೇಳಬೇಕಿಲ್ಲ ಅಲ್ಲವೇ ?

ಪ್ರೀತಿಯ ಕಿಮ್ಮನೆ ಅವರೇ , ನಿಮ್ಮಿಂದ ಈ ಕ್ಷೇತ್ರದಲ್ಲಿ ಒಂದೇ ಒಂದು ಅಭಿವೃದ್ದಿ ಕಾರ್ಯ ಆಗಲಿಲ್ಲ , ತೀರ್ಥಹಳ್ಳಿಯ ಇಡಿ ತಾಲೂಕಿಗೆ ಒಂದೇ ಒಂದು ಮಾದರಿ ಶಾಲೆ ಮಾಡಲು ನಿಮ್ಮ ಕೈಯಲ್ಲಿ ಆಗಲಿಲ್ಲ .. ನಿಮ್ಮದೇ ಮೂಗಿನಡಿಯ ಶಾಲೆಗಳಲ್ಲಿ ಅತ್ಯಾಚಾರ ನಡೆಯುತ್ತಿದ್ದರು ನಿಮ್ಮಿಂದ ಅದನ್ನ ನಿಲ್ಲಿಸಲು ಆಗಲಿಲ್ಲ , ಇಷ್ಟೆಲ್ಲಾ ಇದ್ದರು ನಾವು ನಿಮ್ಮ ಕೊರಳ ಪಟ್ಟಿ ಹಿಡಿದು ಕೇಳಿರಲಿಲ್ಲ ... ಆದರೆ ಇಂದು ನೀವು ರಕ್ಷಿಸಲು ಪ್ರಯತ್ನಿಸುತ್ತಿರುವುದು , ಒಂದು ಎಳೆ ಹೆಣ್ಣು ಮಗಳ ಮೇಲೆ ಅತ್ಯಾಚಾರ ಮಾಡಿದ ಕಾಮುಕರನ್ನ .. ಅವರು ಯಾವುದೇ ಧರ್ಮಕ್ಕೆ ಸೇರಿರಲಿ , ಎಷ್ಟೇ ಶ್ರೀಮಂತರಿರಲಿ .. ಆ ಹೆಣ್ಣು ಮಗಳ ಘೋರ ಸಾವಿಗೆ ಬೆಲೆ ಕೊಡಿ .. ನಿಮ್ಮ ಮಗಳ ಮೇಲೆಯೇ ಇಂತಹದೊಂದು ದೌರ್ಜನ್ಯ ನಡೆದಿದ್ದರೆ , ನಿಮ್ಮ ನಡೆ ಹೀಗೆಯೇ ಇರುತ್ತಿತ್ತೆ ? , ನಮ್ಮ ಸಹನೆಗೂ ಒಂದು ಮಿತಿ ಇದೆ , ಈ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಈಗಲೇ ಕೈ ಬಿಡಿ.. ಇಲ್ಲದೆ ಹೋದರೆ ತೀರ್ಥಹಳ್ಳಿ ರಾಜಕೀಯ ಇತಿಹಾಸದಲ್ಲೇ ನೀವೊಬ್ಬ , ಆಯೋಗ್ಯ , ಭ್ರಷ್ಟ , ಚಾರಿತ್ರ್ಯ ಹೀನ ರಾಜಕಾರಣಿ ಆಗಿ ದಾಖಲಾಗುತ್ತಿರ  ಎಂಬುದು ನೆನಪಿರಲಿ .. ನಿಮ್ಮನ್ನು ಬೆಂಬಲಿಸಲು , ನಿಮ್ಮದೇ ಪಕ್ಷದ ಯಾರೊಬ್ಬರು ಕೂಡ ಮುಂದೆ ಬರುತ್ತಿಲ್ಲ ಎನ್ನುವುದು ನಿಮ್ಮ ಗಮನಕ್ಕಿರಲಿ ..

ಕೊನೆಯದಾಗಿ , ಪ್ರೀತಿಯ ನಂದಿತಾ, ಮತ್ತೆ ಹುಟ್ಟಿ ಬಾ ಎಂದು ಹೇಳುವ ಯೋಗ್ಯತೆ ನಮಗಿಲ್ಲ .. ನಿನ್ನ ಈ ಜನ್ಮದಲ್ಲೇ ಘೋರ ಸಾವಿನಿಂದ ತಪ್ಪಿಸಲು ಆಗದ ನಮಗೆ , ನಿನ್ನ ಮುಂದಿನ ಜನ್ಮದ ಬಗ್ಗೆ ಹೇಳುವ ಯಾವ ಯೋಗ್ಯತೆ ಇದೆ ? , ನಿನ್ನ ಸಾವಿನಲ್ಲಿ ಬೇಳೆ ಬೇಯಿಸಲು ಪ್ರಯತ್ನಿಸುತ್ತಿರುವ ಕಿಮ್ಮನೆ ಅಂತಹ ನೀಚ ರಾಜಕಾರಣಿಯ ಮೇಲೆ, ನಿನ್ನ ಗೋರಿಯ ಮೇಲೆ ಹಣ ಮಾಡಲು ಹೊರಟಿರುವ ಪೋಲೀಸರ ಮೇಲೆ , ನಿನ್ನ ಸಾವಿಗೂ ಬೆಲೆ ಕಟ್ಟಿ , ಪ್ರಕರಣವನ್ನೇ ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವ ದುಷ್ಟರ ಮೇಲೆ  ನಿನ್ನ ಬಿಸಿ ಕಣ್ಣಿರ ಶಾಪ ತಗುಲಲಿ ..
 ನಿನ್ನ ಅನ್ಯಾಯದ ಸಾವಿಗೆ, ನಿನ್ನ ಉಳಿಸಿಕೊಳ್ಳಲು ಆಗದ ನಮ್ಮ ಅಸಹಾಯಕತೆಗೆ , ನನ್ನ ಎರಡು ಕಂಬನಿ ಹನಿಗಳು ಮೀಸಲು .. 


4 ಕಾಮೆಂಟ್‌ಗಳು:

  1. ಮಾತನಾಡಿ ಏನು ಉಪಯೋಗ, ಮಾತಿಗೆ ಒಂದೇ ಅರ್ಥ, ಮೌನಕ್ಕೆ ನೂರು ನೋವುಗಳುಂಟು.

    ಪ್ರತ್ಯುತ್ತರಅಳಿಸಿ
  2. ಏನು ಮಾಡುವುದು ನಮ್ಮ ಸರ್ಕಾರದ ಹಣೆಬರವೇ ಇಷ್ಟು ಆ ಮಗು ನಂದಿತಾ ಆತ್ಮಾಕ್ಕೆ ಶಾಂತಿ ಸಿಗಲ್ಲಿ

    ಪ್ರತ್ಯುತ್ತರಅಳಿಸಿ
  3. ಸರ್ಕಾರದ ಹಣೆ ಬರಹ ಬರೆಯುವವರು ನಾವೇ ಅಲ್ಲವೇ ?, ಬದಲಾಯಿಸಬೇಕಾದವರು ಕೂಡ ನಾವೇ ..

    ಪ್ರತ್ಯುತ್ತರಅಳಿಸಿ
  4. just kidnap kimmane ratnakar house ladies and national brother ladies everything sort out soon if they play games public should use the tactis go ahead don't delay .

    ಪ್ರತ್ಯುತ್ತರಅಳಿಸಿ